
ಹುಬ್ಬಳ್ಳಿ/ಧಾರವಾಡ: ಮಾತು ಬಾರದ, ಕಿವಿ ಕೇಳದ ಆರು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿಗೆ ಎರಡನೇ ಅಧಿಕ ಮತ್ತು ಸತ್ರ ನ್ಯಾಯಾಲಯ ಹಾಗೂ ಪೋಟ್ರೊ ವಿಶೇಷ ಸತ್ರ ನ್ಯಾಯಾಲಯವು 5 ವರ್ಷ ಕಾರಾಗೃಹ ಶಿಕ್ಷೆಯೊಂದಿಗೆ ದಂಡ ಪ್ರಕಟಿಸಿದೆ.
ಸುರೇಶ ವಿಶ್ವನಾಥ ಭೀಮಕರ ಶಿಕ್ಷೆಗೆ ಗುರಿಯಾದವನಾಗಿದ್ದಾನೆ. 2021ರ ಅ.31ರಂದು ಹುಬ್ಬಳ್ಳಿಯ ಸಿಬಿಟಿಯಲ್ಲಿರುವ ತನ್ನ ಪಾನ್ಶಾಪ್ನಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಕುರಿತಂತೆ ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಯಲ್ಲಿ ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಕುರಿತಂತೆ ತನಿಖಾಧಿಕಾರಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿತ್ತು. ಪ್ರಕರಣದ ವಿಚಾರಣೆ ಮಾಡಿದ ನ್ಯಾಯಾಧೀಶರಾದ ರಾಜಕುಮಾರ ಸಿ ಆರೋಪ ಸಾಬೀತಾದ ಕಾರಣ ಆರೋಪಿ ತನಿಗೆ 5 ವರ್ಷ ಕಾರಾಗೃಹ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ.
ಈ ಪೈಕಿ 8 ಸಾವಿರ ರೂ. ವನ್ನು ನೊಂದ ಬಾಲಕಿಗೆ ಹಾಗೂ 2 ಸಾವಿರ ರೂ.ವನ್ನು ಸರಕಾರಕ್ಕೆ ಸಂದಾಯ ಮಾಡುವಂತೆ ಆದೇಶ ನೀಡಲಾಗಿದೆ.
ಅಭಿಯೋಜನೆಯ ಪರವಾಗಿ ಸರಕಾರಿ ಅಭಿಯೋಜಕಿ ಶೈಲಾ ಅಂಗಡಿ ವಾದ ಮಂಡಿಸಿದ್ದರು.




