
ಹುಬ್ಬಳ್ಳಿ: RCB ಕಪ್ ಗೆದ್ದಾಯ್ತು. ಆದ್ರೆ ಇದರ ಸಂಭ್ರಮ ಮಾತ್ರ ಕಡಿಮೆ ಆಗಿಲ್ಲ. ಹೀಗಾಗಿನೇ ಈ ಸಲ ಗಣೇಶ ಹಬ್ಬಕ್ಕೆ ಆರ್ಸಿಬಿ ಕಪ್ ಥೀಮ್ ನಡಿ ಗಣೇಶನಮೂರ್ತಿ ಪ್ರತಿಷ್ಠಾಪನೆ ಮಾಡಿ ಅಭಿಮಾನಿಗಳು ಖುಷಿ ಪಡುತ್ತಿದ್ದಾರೆ
ಹೌದು, ಗಣೇಶ ಹಬ್ಬ ಬಂತ್ತು ಅಂದರೆ ಯುವಕರಲ್ಲಿ ಎಲ್ಲಿಲ್ಲದ ಸಂಭ್ರಮ. ಅದರಲ್ಲೂ ವಿಭಿನ್ನ ಗಣೇಶ ಕೂರಿಸಿ ಎಲ್ಲರ ಗಮನ ಸೆಳೆಯಬೇಕು ಎನ್ನುವುದು ಕಾಮನ್. ಹಾಗಾಗಿ ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದಲ್ಲಿ ಶ್ರೀಸಾಯಿ ಯುವಕರ ಸ್ವಸಹಾಯ ಸಂಘ ಕೊಟಗೊಂಡಹುಣಸಿ ವತಿಯಿಂದ ಆರ್ಸಿಬಿ ಗೆದ್ದ ಕಪ್ ಹಿಡಿದ ಮೂರ್ತಿ ಕೂಡಿಸಿ ಗಣೇಶನ ಭಕ್ತಿಯ ಜೊತೆಗೆ ಆರ್ ಸಿಬಿ ತಂಡದ ಅಭಿಮಾನ ಮೆರೆದಿದೆ.

ಅಂದಹಾಗೇ 17 ವರ್ಷಗಳ ಸತತ ಪ್ರಾರ್ಥನೆಯಿಂದ 18ನೇ ಸೀಜನ್ನಲ್ಲಿ ಎಲ್ಲರ ಕನಸಿನಂತೆ ಆರ್ಸಿಬಿ ಕಪ್ ಗೆದ್ದಾಯ್ತು. ಈ ಖುಷಿಗಾಗಿ ಈ ಬಾರಿಯ ಗಣೇಶೋತ್ಸವದಲ್ಲಿ ಆರ್ಸಿಬಿ ಥೀಮ್ನಡಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಆರ್ ಸಿಬಿ ಗೆಲುವಿಗೆ ಇದ್ದ ವಿಘ್ನಗಳು ಮರೆಯಾಗಿ ಈ ಬಾರಿ ಆರ್ ಸಿಬಿ ಕಪ್ ಗೆ ಮುತ್ತಿಕ್ಕಿದೆ. ಆದರೆ ಗೆದ್ದ ಮೇಲೂ ಸಂಭ್ರಮದ ವೇಳೆ ಸಾಕಷ್ಟು ವಿಘ್ನಗಳು ಎದುರಾದವು, ಅಮಾಯಕ ಅಭಿಮಾನಿಗಳು ಚಿನ್ನಸ್ವಾಮಿ ಮೈದಾನದ ಆವರಣದಲ್ಲಿಯೇ ಸಾವನ್ನಪ್ಪಬೇಕಾಯಿತು. ಹೀಗಾಗಿ ಇದನ್ನೆಲ್ಲಾ ವಿಘ್ನ ನಿವಾರಕ ಗಣೇಶ ಸರಿಪಡಿಸಲಿ, ಮೃತ ಅಭಿಮಾನಗಳ ಕುಟುಂಬಕ್ಕೆ ಸಾಂತ್ವನ, ಧೈರ್ಯ ತುಂಬಲಿ, ರಾಜ್ಯದಲ್ಲಿ ಮಳೆ ಬೆಳೆ ಸರಿಯಾಗಿ ಆಗಿ ಜನರು ನೆಮ್ಮದಿಯ ಜೀವನ ಮಾಡಲಿ ಅಂತ ಗಣಪನ ಭಕ್ತರು, ಆರ್ ಸಿಬಿ ಅಭಿಮಾನಿಗಳು ಈ ಮೂಲಕ ವಿನಾಯಕನಿಗೆ ನಮಿಸುತ್ತಿದ್ದಾರೆ.




