
ಮುಂಡಗೋಡ: ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಯಲ್ಲಾಲಿಂಗ್ ಕುನ್ನೂರ್ (33) ಅವರು ಅನಾರೋಗ್ಯದಿಂದ ಮಂಗಳವಾರ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನದಿಂದ ಪೊಲೀಸ್ ಇಲಾಖೆಯಲ್ಲಷ್ಟೇ ಅಲ್ಲದೆ ಜಿಲ್ಲೆಯಾದ್ಯಂತ ಶೋಕದ ವಾತಾವರಣ ಆವರಿಸಿದೆ.
ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯಲ್ಲಾಲಿಂಗ್ ಕುನ್ನೂರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸರಳತೆ, ಶಿಸ್ತು ಹಾಗೂ ಮಾನವೀಯತೆಯ ಗುಣಗಳಿಂದ ಗುರುತಿಸಿಕೊಂಡಿದ್ದ ಯಲ್ಲಾಲಿಂಗ್ ಕುನ್ನೂರ್ ಅವರು ಮುಂಡಗೋಡಿಗೆ ಎರಡನೇ ಬಾರಿ ಪಿಎಸ್ಐ ಆಗಿ ವರ್ಗಾವಣೆಗೊಂಡು ಸೇವೆ ಸಲ್ಲಿಸುತ್ತಿದ್ದರು. ಇದಕ್ಕೂ ಮುನ್ನ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ, ಜನಸಾಮಾನ್ಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಜನಾನುರಾಗಿಯಾದ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದರು.
ಕರ್ತವ್ಯವನ್ನೇ ಧರ್ಮವನ್ನಾಗಿ ಮಾಡಿಕೊಂಡಿದ್ದ ಈ ಯುವ ಅಧಿಕಾರಿಯ ಅಗಲಿಕೆ ಪೊಲೀಸ್ ಇಲಾಖೆಗೆ ತುಂಬಲಾಗದ ನಷ್ಟವಾಗಿದೆ. ಅವರು ತಮ್ಮ ಪತ್ನಿ ಹಾಗೂ ಒಬ್ಬ ಪುಟ್ಟ ಪುತ್ರಿಯನ್ನು ಅಗಲಿಸಿ ಹೋಗಿದ್ದು, ಕುಟುಂಬದ ಮೇಲೆ ಆಘಾತ ಮೂಡಿಸಿದೆ.
ಪಿಎಸ್ಐ ಯಲ್ಲಾಲಿಂಗ್ ಕುನ್ನೂರ್ ಅವರ ನಿಧನಕ್ಕೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.




