
ಹುಬ್ಬಳ್ಳಿ: ಇಷ್ಟು ದಿನಗಳ ಕಾಲ ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಅಕ್ರಮ ರಿಫಿಲಿಂಗ್ ಇದೀಗ ನಗರಕ್ಕೂ ವ್ಯಾಪಿಸಿದ್ದು, ಇದೀಗ ಖಚಿತ ಮಾಹಿತಿ ಮೇರೆಗೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಗ್ಯಾಸ್ ಅಡ್ಡೆಯ ಮೇಲೆ ದಾಳಿ ಮಾಡಿ ದಂಧೆ ಕೋರರಿಗೆ ಬಿಸಿ ಮುಟ್ಟಿಸಿದ್ದಾರೆ.
ಹೌದು, ಕಾರವಾರ ರಸ್ತೆಯ ಕೆಂಪಗೇರಿ ಹತ್ತಿರದ ಗೂಡೌನ್’ದಲ್ಲಿ ಅಕ್ರಮವಾಗಿ ಕರ್ಮಷಿಯಲ್ ಖಾಲಿ ಸಿಲಿಂಡರ್ ಸಂಗ್ರಹ ಮಾಡಿದ್ದಾರೆ.
ಇದಲ್ಲದೇ ಇವುಗಳನ್ನು ನಗರದ ಹೊಟೆಲ್, ವಾಣಿಜ್ಯ ಕೆಲಸಕ್ಕೆ ಮಾರಾಟ ಮಾಡಲಾಗುತ್ತಿತ್ತು, ಈ ಬಗ್ಗೆ ಖಚಿತ ಮಾಹಿತಿ ಸಿಗುತ್ತಿದ್ದಂತೆ ಹಳೇಹುಬ್ಬಳ್ಳಿ ಠಾಣೆಯ ಪೊಲೀಸರು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ದಾಳಿ ಮಾಡಿ ಬರೋಬರಿ 4.09 ಲಕ್ಷ ರೂ ಮೌಲ್ಯದ ವಾಣಿಜ್ಯ ಬಳಕೆಯ 409 ಖಾಲಿ ಗ್ಯಾಸ್ ಸಿಲಿಂಡರ್’ಗಳನ್ನು ವಶಪಡಿಸಿಕೊಂಡಿದ್ದಾರೆ.
ಇನ್ನು ದಾಳಿ ಕಾಲಕ್ಕೆ ಆನಂದನಗರದ ನಿವಾಸಿ ರಾಜೇಸಾಬ ಕಟ್ಟಿಮನಿ (59) ಎಂಬಾತನನ್ನು ಬಂಧನ ಮಾಡಲಾಗಿದ್ದು, ಮತ್ತೊರ್ವ ಹಾವೇರಿ ಮೂಲದ ಕಿರಣ ಮಾಗಾವಿ ಪರಾರಿಯಾಗಿದ್ದಾರೆ.
ಈ ಕುರಿತು ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ಯಾಸ್ ದಂಧೆಕೋರರಿಗೆ ಕಮಿಷನರ್ ವಾರ್ನಿಂಗ್

ಯಾವುದೇ ಪರವಾನಗಿ ಇಲ್ಲದೇ ವಾಣಿಜ್ಯ ಬಳಕೆಯ ಸಿಲಿಂಡರ್ ದಾಸ್ತಾನು ಮಾಡಲಾಗಿತ್ತು. ಈ ಬಗ್ಗೆ ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಓರ್ವನನ್ನು ಬಂಧಿಸಿ ವಿಚಾರಣೆ ಮಾಡಲಾಗುತ್ತಿದೆ. ಈ ಪ್ರಕರಣದಲ್ಲಿ ಮತ್ತೊರ್ವ ಪರಾರಿಯಾಗಿದ್ದಾನೆ. ಆತನ ಬಂಧನಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತಿಳಿಸಿದ್ದಾರೆ.




