
ಮುಂಡಗೋಡ: “ಹಿತ್ತಲ ಗಿಡ ಮದ್ದಲ್ಲ” ಎಂಬ ಗಾದೆ ಮಾತಿನಂತೆ, ಇಡೀ ಪಟ್ಟಣದ ಸ್ವಚ್ಛತೆಯ ಹೊಣೆ ಹೊತ್ತಿರುವ ಮುಂಡಗೋಡ ಪಟ್ಟಣ ಪಂಚಾಯತ್ ಆವರಣದಲ್ಲೇ ಈಗ ನೈರ್ಮಲ್ಯದ ಅಧಃಪತನ ಕಂಡುಬಂದಿದೆ. ಇಲ್ಲಿನ ಅಂಗವಿಕಲರ ಶೌಚಾಲಯದ ಸ್ಥಿತಿಯನ್ನು ನೋಡಿದರೆ, “ಊರಿಗೆಲ್ಲಾ ಬುದ್ಧಿ ಹೇಳುವವರು ತಮ್ಮ ಮನೆಯನ್ನೇ ಮರೆತಿದ್ದಾರೆ” ಎಂಬ ಸಾರ್ವಜನಿಕರ ಆಕ್ರೋಶಕ್ಕೆ ಪುಷ್ಟಿ ನೀಡುವಂತಿದೆ.
ಪಟ್ಟಣ ಪಂಚಾಯತ್ ಆವರಣದಂತಹ ಪ್ರಮುಖ ಸ್ಥಳದಲ್ಲೇ ಇರುವ ಈ ಅಂಗವಿಕಲರ ಶೌಚಾಲಯವು ನಿರ್ವಹಣೆಯಿಲ್ಲದೆ ಗಬ್ಬು ನಾರುತ್ತಿದೆ. ಶೌಚಾಲಯದ ತುಂಬೆಲ್ಲಾ ಕಸದ ರಾಶಿ ಬಿದ್ದಿದ್ದು, ಒಳಗೆ ಕಾಲಿಡಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನು ಶೌಚಾಲಯದ ಬಾಗಿಲು ಮುರಿದು ಬಿದ್ದಿರುವುದು ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.
ಪಟ್ಟಣವನ್ನು ಸುಂದರವಾಗಿ ಮತ್ತು ಸ್ವಚ್ಛವಾಗಿಡುವ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ಕಣ್ಣೆದುರೇ ಈ ಅವ್ಯವಸ್ಥೆ ಇರುವುದು ವಿಪರ್ಯಾಸ. “ತಮ್ಮ ಕಚೇರಿಯ ಆವರಣವನ್ನೇ ಸ್ವಚ್ಛವಾಗಿಟ್ಟುಕೊಳ್ಳಲಾಗದವರು ಇನ್ನು ಇಡೀ ಪಟ್ಟಣದ ನೈರ್ಮಲ್ಯವನ್ನು ಹೇಗೆ ಕಾಪಾಡುತ್ತಾರೆ?” ಎಂದು ಸಾರ್ವಜನಿಕರು ತೀಕ್ಷ್ಣವಾಗಿ ಪ್ರಶ್ನಿಸುತ್ತಿದ್ದಾರೆ.
ಪಟ್ಟಣ ಪಂಚಾಯತಿಯಲ್ಲಿ ಸಾಕಷ್ಟು ಸಂಖ್ಯೆಯ ಪೌರಕಾರ್ಮಿಕರಿದ್ದರೂ ಸಹ, ಸ್ವಂತ ಆವರಣದ ಶೌಚಾಲಯದ ಸುಚಿತ್ವ ಕಾಪಾಡುವಲ್ಲಿ ವಿಫಲವಾಗಿರುವುದು ಬೇಸರದ ಸಂಗತಿಯಾಗಿದೆ.
ವಿಶೇಷವಾಗಿ ಅಂಗವಿಕಲರಿಗಾಗಿ ಇರುವ ಈ ಸೌಲಭ್ಯವು ಬಳಕೆಗೆ ಬಾರದಂತಿರುವುದು ಮಾನವೀಯತೆಯ ದೃಷ್ಟಿಯಿಂದಲೂ ಖಂಡನೀಯ.
“ದಿನವಾಣಿ” ಈ ವರದಿಯ ನಂತರವಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಅಂಗವಿಕಲರ ಶೌಚಾಲಯಕ್ಕೆ ಕಾಯಕಲ್ಪ ನೀಡುವರೇ? ಎಂಬುದನ್ನು ಕಾದು ನೋಡಬೇಕಿದೆ.




